ಸುನಿ ಚಿತ್ರದ ಪ್ರಚಾರ ಗೀತೆಗೆ ‘ದೇವರು ರುಜು…’ ಮಾಡಿದ!
‘ದೇವರು ರುಜು ಮಾಡಿದನು’ ಸಿನೆಮಾ ಪ್ರಮೋಷನಲ್ ಸಾಂಗ್ ಔಟ್
ಚಿತ್ರದ ‘ಹ್ಯಾಪಿ ಬರ್ತಡೇ’ ಹಾಡಿಗೆ ಯುವನಟ ವಿರಾಜ್ ಭರ್ಜರಿ ಸ್ಟೆಪ್ಸ್
‘ದೇವರು ರುಜು ಮಾಡಿದನು’ ಚಿತ್ರದ ಮೂಲಕ ವಿರಾಜ್ ಚಿತ್ರರಂಗಕ್ಕೆ
ಇತ್ತೀಚೆಗಷ್ಟೇ ‘ಗತವೈಭವ’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದ ನಿರ್ದೇಶಕ ಸಿಂಪಲ್ ಸುನಿ, ಈಗ ಸದ್ದಿಲ್ಲದೆ ಮತ್ತೊಂದು ಸಿನೆಮಾವನ್ನು ಪ್ರೇಕ್ಷಕರ ಮುಂದಿಡುವ ತಯಾರಿ ಮಾಡಿಕೊಂಡಿದ್ದಾರೆ. ಹೌದು, ‘ಗತವೈಭವ’ ಸಿನೆಮಾದ ನಂತರ ನಿರ್ದೇಶಕ ಸಿಂಪಲ್ ಸುನಿ ‘ದೇವರು ರುಜು ಮಾಡಿದನು’ ಸಿನೆಮಾಕ್ಕೆ ಆಕ್ಷನ್-ಕಟ್ ಹೇಳಿದ್ದು, ಇದೀಗ ಈ ಸಿನೆಮಾ ಬಿಡುಗಡೆಯ ಹಂತಕ್ಕೆ ಬಂದಿದೆ.
ಇದೀಗ ನಿಧಾನವಾಗಿ ‘ದೇವರು ರುಜು ಮಾಡಿದನು’ ಸಿನೆಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರುವ ಚಿತ್ರತಂಡ, ಸಿನೆಮಾದ ಪ್ರಮೋಷನಲ್ ಸಾಂಗ್ ಅನ್ನು ಬಿಡುಗಡೆ ಮಾಡಿದೆ.
ಯುವನಟ ವಿರಾಜ್ ಹೀರೋ…
‘ದೇವರು ರುಜು ಮಾಡಿದನು’ ಸಿನೆಮಾದ ಮೂಲಕ ರಂಗಭೂಮಿ ಕಲಾವಿದ ವಿರಾಜ್, ಹೀರೋ ಆಗಿ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ‘ದೇವರು ರುಜು ಮಾಡಿದನು’ ಚಿತ್ರದಲ್ಲಿ ನಾಯಕ ನಟ ವಿರಾಜ್ ಗೆ ಯುವ ನಟಿಯರಾದ ಕೀರ್ತಿ ಕೃಷ್ಣ ಹಾಗೂ ದ್ವಿತಾ ರೈ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಸಿಂಪಲ್ ಸುನಿ ಇಲ್ಲೂ ಎಲ್ಲ ಕೆಲಸ ಮಾಡಿದ್ದಾರೆ. ‘ದೇವರು ರುಜು ಮಾಡಿದನು’ ಚಿತ್ರಕ್ಕೆ ಸಿಂಪಲ್ ಸುನಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.
‘ದೇವರು ರುಜು ಮಾಡಿದನು’ ಪ್ರಮೋಷನಲ್ ಸಾಂಗ್…
ಸದ್ಯ ‘ದೇವರು ರುಜು ಮಾಡಿದನು’ ಸಿನೆಮಾದ ಪ್ರಚಾರ ಕಾರ್ಯಕ್ಕೆ ಚಾಲನೇ ನೀಡಿರುವ ಚಿತ್ರತಂಡ, ಸಿನೆಮಾ ‘ಹ್ಯಾಪಿ ಬರ್ತಡೇ’ ಎಂಬ ಪ್ರಮೋಷನಲ್ ಸಾಂಗ್ ಅನ್ನು ಬಿಡುಗಡೆ ಮಾಡಿದೆ.
ತಮಿಳಿನ ಖ್ಯಾತ ಗಾಯಕ ಅಂಥೋನಿ ದಾಸ್ ಹಾಡಿರುವ ಈ ಗೀತೆಗೆ ನಾಗಾರ್ಜುನ ಶರ್ಮ ಸಾಹಿತ್ಯವಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಲ್ಲಿ ಈ ಗೀತೆ ಮೂಡಿಬಂದಿದೆ. ‘ದೇವರು ರುಜು ಮಾಡಿದನು’ ಸಿನೆಮಾ ಪ್ರಮೋಷನಲ್ ಸಾಂಗ್ ಬಿಡುಗಡೆ ವೇಳೆ ಹಾಜರಿದ್ದ ಚಿತ್ರತಂಡ, ಸಿನೆಮಾದ ಬಗ್ಗೆ ಒಂದಷ್ಟು ಮಾತನಾಡಿತು.
‘ದೇವರು ರುಜು ಮಾಡಿದನು’ ಚಿತ್ರದಲ್ಲಿ ಬರೋಬ್ಬರಿ 12 ಸಾಂಗ್ಸ್!
‘ದೇವರು ರುಜು ಮಾಡಿದನು’ ಚಿತ್ರದ ಪ್ರಮೋಷನಲ್ ಹಾಡು ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ”ದೇವರು ರುಜು ಮಾಡಿದನು’ ಮ್ಯೂಸಿಕಲ್ ಜರ್ನಿ ಸಿನೆಮಾ. ಈ ಚಿತ್ರದಲ್ಲಿ ಒಟ್ಟು 12 ಸಾಂಗ್ ಇದೆ. ವಿರಾಜ್ ಅದ್ಭುತ ಡ್ಯಾನ್ಸರ್. ಗಾಯಕ ಆಂಥೋನಿ ಈ ಹಾಡನ್ನು ಪ್ರಮೋಷನ್ ಮಾಡಲು ಇಲ್ಲಿಗೆ ಬಂದಿದ್ದಾರೆ. ನಾಗಾರ್ಜುನ ಶರ್ಮ ಈ ಹಾಡಿಗೆ ಒಳ್ಳೆ ಸಾಹಿತ್ಯ ಕೊಟ್ಟಿದ್ದಾರೆ. ಒಳ್ಳೆಯ ಕಲಾದಂಡು ಚಿತ್ರದಲ್ಲಿ ಇದೆ’ ಎಂದರು.
ನಾಯಕ ನಟ ವಿರಾಜ್ ಕನಸು… ನನಸು…
ನಾಯಕ ನಟ ವಿರಾಜ್ ಮಾತನಾಡಿ, ‘ಸಿನೆಮಾ ಅನ್ನೋದು ಕನಸು, ದಾರಿ, ಜೀವನ. ಚಿಕ್ಕ ವಯಸ್ಸಿನಿಂದ ನಾನು ಇದನ್ನೇ ಅಂದುಕೊಂಡು ಬಂದಿದ್ದೇನೆ. ಈಗ ಅದನ್ನೇ ಫಾಲೋ ಮಾಡುತ್ತಿದ್ದೇನೆ. ನಮ್ಮ ಜೀವನದಲ್ಲಿ ಅಂದುಕೊಂಡ ಕೆಲಸ ಆಗುವುದಿಲ್ಲ. ಬೇರೆಯದ್ದೇ ಆಗುತ್ತದೆ.
ಇದನ್ನು ದೇವರು ರುಜು ಮಾಡಿರುತ್ತಾನೆ. ‘ಹ್ಯಾಪಿ ಬರ್ತಡೇ’ ಹಾಡಿಗೆ ಮಾಸ್ ರೂಪ ಕೊಟ್ಟಿದ್ದೇವೆ. ಇದು ಎಲ್ಲರ ಹುಟ್ಟುಹಬ್ಬಕ್ಕೆ ಬೇಕಾಗುವ ಹಾಡು. ಇದನ್ನು ಹೊರತುಪಡಿಸಿ ಬಹಳ ಅದ್ಭುತ ಹಾಡು ನಮ್ಮ ಚಿತ್ರದಲ್ಲಿ ಇದೆ’ ಎಂದರು.
‘ದೇವರು ರುಜು ಮಾಡಿದನು’ ಚಿತ್ರದ ಪ್ರಮೋಷನ್ ಸಾಂಗ್ ಬಿಡುಗಡೆ ವೇಳೆ ಹಾಜರಿದ್ದ ಗಾಯಕ ಆಂಥೋನಿ ದಾಸ್ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು. ಕಲಾವಿದರಾದ ಕೀರ್ತಿ ಕೃಷ್ಣ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ‘ದೇವರು ರುಜು ಮಾಡಿದನು’ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದ್ದು, ‘ಗ್ರೀನ್ ಹೌಸ್ ಮೂವೀಸ್’ ಬ್ಯಾನರ್ ನಡಿ ಗೋವಿಂದ್ ರಾಜ್ ಸಿ. ಟಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.















