‘ದೇವಿ ಮಹಾತ್ಮೆ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ದೇವಿ ಮಹಾತ್ಮೆ’ ಚಿತ್ರ
ಕುಂದಾಪುರ ಸುತ್ತಮುತ್ತ ಚಿತ್ರೀಕರಣ ಮುಗಿಸಿದ ‘ದೇವಿ ಮಹಾತ್ಮೆ’ ಚಿತ್ರತಂಡ
ನಾಗರಾಜ್ ಸೋಮಯಾಜಿ ನಿರ್ದೇಶನದ ಕಾಮಿಡಿ-ಥ್ರಿಲ್ಲರ್ ಚಿತ್ರ
ಕೆಲ ದಿನಗಳ ಹಿಂದಷ್ಟೇ ಉಡುಪಿ ಜಿಲ್ಲೆಯ ಕಮಲಶಿಲೆಯ ಶ್ರೀ ಬ್ರಾಹ್ಮೀ ದೇಗುಲದಲ್ಲಿ ಸರಳವಾಗಿ ಮುಹೂರ್ತವನ್ನು ನೆರವೇರಿಸಿದ್ದ ‘ದೇವಿ ಮಹಾತ್ಮೆ’ ಚಿತ್ರತಂಡ, ಇದೀಗ ಸದ್ದಿಲ್ಲದೆ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಸುತ್ತಮುತ್ತ ಸುಂದರ ತಾಣಗಳಲ್ಲಿ
‘ದೇವಿ ಮಹಾತ್ಮೆ’ ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದ್ದು, ಶೀಘ್ರದಲ್ಲೇ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣ ಆರಂಭಿಸುವ ಯೋಜನೆಯಲ್ಲಿದೆ.
ಅಂದಹಾಗೆ, ನಿರ್ದೇಶಕ ನಾಗರಾಜ್ ಸೋಮಯಾಜಿ, ‘ದೇವಿ ಮಹಾತ್ಮೆ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಫ್ಯಾಮಿಲಿ ಆಡಿಯನ್ಸ್ ಗಾಗಿ ‘ಮರ್ಯಾದೆ ಪ್ರಶ್ನೆ’ ಎಂಬ ಸದಭಿರುಚಿ ಚಿತ್ರವನ್ನು ನಿರ್ದೇಶಿಸಿದ್ದ ನಾಗರಾಜ್ ಸೋಮಯಾಜಿ, ಈ ಬಾರಿ ‘ದೇವಿ ಮಹಾತ್ಮೆ’ ಎಂಬ ಚಿತ್ರದ ಮೂಲಕ ಹೊಸಥರದ ಔಟ್ ಅಂಡ್ ಔಟ್ ಕಾಮಿಡಿ-ಥ್ರಿಲ್ಲರ್ ಕಥೆಯನ್ನು ಹೊಸರೀತಿಯಲ್ಲಿ ಪ್ರೇಕ್ಷಕರ ಮುಂದೆ ಹೇಳೋದಿಕ್ಕೆ ಹೊರಟಿದ್ದಾರೆ.
ಬಿಸಿಲ ಝಳದ ನಡುವೆಯೂ ಬತ್ತದ ಉತ್ಸಾಹ!
ಇನ್ನು ‘ದೇವಿ ಮಹಾತ್ಮೆ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿರುವ ಬಗ್ಗೆ ಅನಿಸಿಕೆ ಹಂಚಿಕೊಂಡಿರುವ ನಿರ್ದೇಶಕ ನಾಗರಾಜ್ ಸೋಮಯಾಜಿ, ‘ಬಿಸಿಲಲ್ಲಿ ಕೆಲಸ ಮಾಡುವುದು ಸಾಹಸ. ಅದರಲ್ಲಿಯೂ ಕುಂದಾಪುರ ಬಿಸಿಲು ಝಳದಲ್ಲಿ ಇಡೀ ತಂಡ ಉತ್ಸಹದಿಂದ ಕೆಲಸ ಮಾಡಿದೆ.
ಕಡಿಮೆ ತಾಂತ್ರಿಕ ವರ್ಗದೊಂದಿಗೆ ನಿರ್ಮಾಪಕರಿಗೆ ಹೊರೆಯಾಗದಂತೆ ಚಿತ್ರೀಕರಣ ನಡೆಸಲಾಗಿದೆ. ಇನ್ನೂ, ನಿರ್ಮಾಪಕ ಗಾಂಧಿರಾಜನ್ ಕನ್ನಡ ಸಿನೆಮಾ ಬಗ್ಗೆ ತುಂಬಾನೇ ಆಸಕ್ತಿ ಇದ್ದು, ಖುಷಿಯಿಂದ ಶೂಟಿಂಗ್ ಸೆಟ್ ಗೆ ಭೇಟಿ ನೀಡಿದ್ದರು. ಸಿನೆಮಾ ನಾವು ಅಂದುಕೊಂಡಂತೆ, ತುಂಬ ಚೆನ್ನಾಗಿ ಮೂಡಿಬರುತ್ತಿದೆ’ ಎಂದರು.
ಇನ್ನು ಮೊದಲೇ ಹೇಳಿದಂತೆ, ‘ದೇವಿ ಮಹಾತ್ಮೆ’ ಕಾಮಿಡಿ-ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ನಾಗರಾಜ ಸೋಮಯಾಜಿ ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳುತ್ತಿರುವ ‘ದೇವಿ ಮಹಾತ್ಮೆ’ ಚಿತ್ರದ ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ ಹಾಗೂ ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ನಿರ್ದೇಶಕ ನಾಗರಾಜ್ ಸೋಮಯಾಜಿ ಅವರಿಗೆ ಜೊತೆಯಾಗಿದ್ದಾರೆ.
ಇದೇ ವರ್ಷಾಂತ್ಯಕ್ಕೆ ‘ದೇವಿ ಮಹಾತ್ಮೆ’ ದರ್ಶನದ ನಿರೀಕ್ಷೆ..!
‘ಯುವಿಜಿ ಸ್ಟುಡಿಯೋ’ ಬ್ಯಾನರ್ ನಡಿ ವಿದ್ಯಾ ಗಾಂಧಿರಾಜನ್ ಸಿನೆಮಾಗೆ ಬಂಡವಾಳ ಹೂಡಲಿದ್ದಾರೆ. ಗಾಂಧಿರಾಜನ್ ನಿರ್ಮಾಣದಲ್ಲಿ ನಾಗರಾಜ್ ಸೋಮಯಾಜಿಗೆ ಸಾಥ್ ಕೊಟ್ಟಿದ್ದಾರೆ. ಎಸ್. ಕೆ. ರಾವ್ ಛಾಯಾಗ್ರಹಣ ಹಾಗೂ ಲಿಕಿತ್ ಪ್ರಸಾದ್ ಕೆ. ಶೆಟ್ಟಿ ಸಂಗೀತ ನಿರ್ದೇಶನ ‘ದೇವಿ ಮಹಾತ್ಮೆ’ಗೆ ಇರಲಿದೆ. ಚಿತ್ರತಂಡದ ಯೋಜನೆಯಂತೆ, ಎಲ್ಲವೂ ಸರಾಗವಾಗಿ ನಡೆದರೆ, ಇದೇ ವರ್ಷದ ಕೊನೆಯೊಳಗೆ ‘ದೇವಿ ಮಹಾತ್ಮೆ’ ಚಿತ್ರವನ್ನು ಕನ್ನಡದ ಚಿತ್ರಪ್ರೇಮಿಗಳ ಮುಂದೆ ತರುವ ಯೋಜನೆಯನ್ನು ಹಾಕಿಕೊಂಡಿದೆ ಚಿತ್ರತಂಡ.















