ರಾಜಕಾರಣದಿಂದ ಚಿತ್ರರಂಗದತ್ತ ಸಾರಾ ಮಹೇಶ್!
ನಿರ್ಮಾಪಕನಾಗುತ್ತಿರುವ ಮಾಜಿ ಶಾಸಕ ಸಾರಾ ಮಹೇಶ್
ಚಂದನವನದಲ್ಲಿ ಜೆಡಿಎಸ್ ಮಾಜಿ ಶಾಸಕ ಸಾರಾ ಮಹೇಶ್ ಚಿತ್ರ ನಿರ್ಮಾಣ…
ಹೊಸ ತಂಡದ ಪ್ರಯತ್ನಕ್ಕೆ ಸಾಥ್ ಕೊಟ್ಟ ಸಾರಾ ಮಹೇಶ್
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ರಾಜಕಾರಣಿಯಾಗಿ, ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿರುವ ಜೆಡಿಎಸ್ನ ಮಾಜಿ ಶಾಸಕ ಸಾರಾ ಮಹೇಶ್, ಈಗ ರಾಜಕಾರಣದ ಜೊತೆಗೆ ಚಿತ್ರರಂಗದತ್ತಲೂ ಮುಖ ಮಾಡುತ್ತಿದ್ದಾರೆ. ಹೌದು, ಸಾರಾ ಮಹೇಶ್, ‘ಗೌರಿ ಆರ್ಟ್ಸ್’ ಬ್ಯಾನರ್ ಎಂಬ ಹೆಸರಿನಲ್ಲಿ ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಈ ಸಂಸ್ಥೆಯ ಮೂಲಕ ಹೊಸಚಿತ್ರವನ್ನು ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. 
ಇನ್ನು ಸಾರಾ ಮಹೇಶ್, ತಮ್ಮ ನಿರ್ಮಾಣನ ಸಂಸ್ಥೆಯಲ್ಲಿ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರಕ್ಕೆ ‘ಏಳುಮಲೆ’ ಖ್ಯಾತಿಯ ಪ್ರಿಯಾಂಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಯಾರೇ ನೀನು ಚೆಲುವೆ…’ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದ ಸಂಗೀತ ಮಾಧವನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಮೂಲಕ ಸಂಗೀತ ಮತ್ತೆ ಸ್ಯಾಂಡಲ್ವುಡ್ಗೆ ಕಂಬ್ಯಾಕ್ ಆಗುತ್ತಿದ್ದಾರೆ.
ಸದ್ಯಕ್ಕೆ ಇನ್ನೂ ಹೆಸರಿಡದ ಈ ಸಿನೆಮಾವನ್ನು ನಟ ಸುದೀಪ್ ಅವರ ಗರಡಿಯಲ್ಲಿ ಗುರುತಿಸಿಕೊಂಡಿರುವ ಕಿರಣ್ ವಿಶ್ವನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಗ್ರಾಮೀಣ ಸೊಗಡಿನ ಕಥೆಯಿರುವ ಸೆಂಟಿಮೆಂಟ್ ಸಬ್ಜೆಕ್ಟ್ ಸಿನೆಮಾ ಎನ್ನಲಾಗುತ್ತಿದ್ದು, ಈಗಾಗಲೇ ಈ ಸಿನೆಮಾದ ಸ್ಕ್ರಿಪ್ಟ್ ಕೆಲಸಗಳು ಬಹುತೇಕ ಪೂರ್ಣಗೊಂಡಿದೆ. ಸದ್ಯ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಅಂತಿಮ ಹಂತದಲ್ಲಿದೆ ಎಂಬುದು ಚಿತ್ರತಂಡದ ಮೂಲಗಳ ಮಾಹಿತಿ. ಇನ್ನು ಶೀಘ್ರದಲ್ಲಿಯೇ ಈ ಚಿತ್ರದ ನಾಯಕ ನಟನನ್ನು ಹೊಸ ರೀತಿಯಲ್ಲಿ ಪ್ರೇಕ್ಷಕ ಮುಂದೆ ಪರಿಚಯಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಉಳಿದಂತೆ ಈ ಹೊಸಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.















