ಹೊರಬಂತು ‘ಕಾಲೇಜ್ ಕಲಾವಿದ’ನ ಹೊಸ ಹಾಡು

‘ಕಾಲೇಜ್ ಕಲಾವಿದ’ ಸಿನೆಮಾದ ಹೊಸ ಹಾಡು ಬಿಡುಗಡೆ
‘ಸಿಂಗಾರ ನೀನೆ…’ ಎಂದು ಹಾಡುತ್ತಾ ಬಂದ ‘ಕಾಲೇಜ್ ಕಲಾವಿದ’
ಹೊಸಬರ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಕಾಲೇಜು ಲವ್ ಸ್ಟೋರಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಿನೆಮಾಗಳು ಬಂದಿರುವುದು, ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಅದೇ ಕಾಲೇಜ್ ಹೆಸರನ್ನೇ ಇಟ್ಟುಕೊಂಡು ಇಲ್ಲೊಂದು ಹೊಸಬರ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಆ ಸಿನೆಮಾದ ಹೆಸರು ‘ಕಾಲೇಜ್ ಕಲಾವಿದ’. ಸದ್ಯ ಟೈಟಲ್ ನಲ್ಲಿಯೇ ಗಮನ ಸೆಳೆಯುತ್ತಿರುವ ‘ಕಾಲೇಜ್ ಕಲಾವಿದ’ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಸಿನೆಮಾ. ಇನ್ನು ಪ್ರತಿ ಕಾಲೇಜಿನಲ್ಲೂ ಕಲಾವಿದರು ಇದ್ದೆ ಇರುತ್ತಾರೆ. ಈ ಸಿನೆಮಾ ಮೂಲಕ ‘ಕಾಲೇಜ್’ನಲ್ಲಿರುವ ಅಂಥದ್ದೇ ಒಬ್ಬ ‘ಕಲಾವಿದ’ ಹೇಗೆ ಹೊರಬರಲಿದ್ದಾನೆ ಎಂಬುದನ್ನ ನೋಡಬೇಕಿದೆ. ಸದ್ಯ ರಿಲೀಸ್ ಗೆ ರೆಡಿಯಾಗಿರೋ ‘ಕಾಲೇಜ್ ಕಲಾವಿದ’ ಸಿನೆಮಾದಿಂದ ಎರಡು ಹಾಡು ‘ಆನಂದ್ ಆಡಿಯೋ’ನಲ್ಲಿ ರಿಲೀಸ್ ಆಗಿದೆ.
ರಮೇಶ್ ಅರವಿಂದ್ ಕೈಯಲ್ಲಿ ಹೊರಬಂದ ಹಾಡು
ಕನ್ನಡ ಚಿತ್ರರಂಗದ ಸ್ಪುರದ್ರೂಪಿ ನಟ ಕಂ ನಿರ್ದೇಶಕ ರಮೇಶ್ ಅರವಿಂದ್, ‘ಕಾಲೇಜ್ ಕಲಾವಿದ’ ಚಿತ್ರದ ಎರಡನೇ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಸಿಂಗಾರ ನೀನೆ…’ ಎಂಬ ಸಾಲಿನಿಂದ ಶುರುವಾಗುವ ‘ಕಾಲೇಜ್ ಕಲಾವಿದ’ ಹಾಡು ಸದ್ಯ ‘ಆನಂದ್ ಆಡಿಯೋ’ದಲ್ಲಿ ಲಭ್ಯವಿದೆ. ‘ಕಾಲೇಜ್ ಕಲಾವಿದ’ ಸಿನೆಮಾದ ಹಾಡುಗಳ ಹಕ್ಕನ್ನು ‘ಆನಂದ್ ಆಡಿಯೋ’ ಪಡೆದುಕೊಂಡಿದೆ. ಹಾಗೂ ‘ಹೊಂಟಾಯ್ತು ಹಮ್ಮೀರಾ “ಎಂಬ ಎರಡನೇ ಹಾಡನ್ನು ಭಾರತೀಯ ಚಿತ್ರರಂಗದಲ್ಲೇ ಮೊದಲನೇ ಭಾರಿಗೆ ವಿಭಿನ್ನವಾಗಿ, ಬೈಕ್ ಲಾಗರ್ಸ್ ರವರಿಂದ ಬಿಡುಗಡೆ ಮಾಡಿಸಿದ್ದು, ಮಾನ್ಸೂನ್ ಸೀಸನ್ ಗೆ ಈ ಹಾಡು ಹೇಳಿ ಮಾಡಿಸಿದ ಹಾಗಿದೆ. ಕಾಲೇಜ್ ಕಲಾವಿದ ಸಿನೇಮಾವನ್ನು ಸಂಜಯ್ ಮಳವಳ್ಳಿ ಬರೆದು ನಿರ್ದೇಶನ ಮಾಡಿದ್ದಾರೆ.
ಸಂಜಯ್ ಮಳವಳ್ಳಿ ಅವರು ಸಿನಿಮಾ ರಂಗದಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರಹಗಾರರಾಗಿ ಹಲವಾರು ಸಿನೇಮಾಗಳಲ್ಲಿ ಕೆಲಸ ಮಾಡಿರುವ ಅನುಭವವಿದೆ. ಅಷ್ಟೇ ಅಲ್ಲದೇ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವ ಸಂಜಯ್ ಮಳವಳ್ಳಿ ಅವರದ್ದು. ಸಿನೇಮಾ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ನಿರ್ದೇಶಕನಾಗಬೇಕೆಂಬ ಕನಸು. ಇಂದಿಗೆ ಆ ಕನಸು ನನಸಾಗಿದೆ. ಸಿನಿಮಾದ ಸಾಂಗ್ ಕೂಡ ರಿಲೀಸ್ ಆಗಿದ್ದು, ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಬಂದಿದೆ. ಇದು ಇಡೀ ಚಿತ್ರತಂಡಕ್ಕೆ ಸಂತಸವನ್ನು ನೀಡಿದೆ.
‘ಕಾಲೇಜ್ ಕಲಾವಿದ’ ಸಿನಿಮಾವನ್ನು ‘ಗಜಾನನ ಫಿಲ್ಮ್ಸ್’ ಬ್ಯಾನರ್ ನಲ್ಲಿ ತರುಣ್ ಶರ್ಮಾ ನಿರ್ಮಾಣ ಮಾಡಿದ್ದು, ಆರವ್ ಸೂರ್ಯ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಆರವ್ ಸೂರ್ಯ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದು ಅವರ ಮೂರನೇಯ ಸಿನಿಮಾವಾಗಿದೆ. ಇದರ ಜೊತೆಗೆ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಚೈತ್ರ ಲೋಕನಾಥ್ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಉಳಿದಂತೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಹುಲಿ ಕಾರ್ತಿಕ್ ಹಾಗೂ ಹರಿಣಿ ಶ್ರೀಕಾಂತ್ ಹಾಗೂ ರಮೇಶ್ ಭಟ್, ಶೈಲಪುತ್ರಿ ಪೋಷಕ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ನಿಖೀಲ್, ನಂದಿನಿ, ದಿನೇಶ್ ಕುಲಕರ್ಣಿ, ನವೀನ್, ನಿರಂತ್ ಸೂರ್ಯ, ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಲವ್, ಕಮರ್ಷಿಯಲ್ – ಥ್ರಿಲ್ಲಿಂಗ್ ಜಾನರ್ ಇರುವ ಈ ಚಿತ್ರಕ್ಕೆ ಆನಂದ್ ಸುಂದರೇಶ ಛಾಯಾಗ್ರಹಣ ಮಾಡಿದ್ದಾರೆ. ಮಹೇಶ್ ಗಂಗಾವತಿ ಸಂಕಲನ, ಸಂಗೀತ ನಿರ್ದೇಶಕರಾಗಿ ಸುರಾಜ್ ಜೋಯಿಸ್ ಮ್ಯಾಜಿಕ್ ಮಾಡಲಿದ್ದಾರೆ. ಹಂಚಿಕೆದಾರರಾಗಿ ‘ಶಾಲಿನಿ ಆರ್ಟ್ಸ್’ ಚಿತ್ರಕ್ಕೆ ಸಾಥ್ ನೀಡಿದೆ.