Quick ಸುದ್ದಿಗೆ ಒಂದು click

ಅದೃಷ್ಟವಂತರಿಗೆ ‘ಕರಳೆ’ ಸಿನೆಮಾ ತಂಡದಿಂದ ಐ ಫೋನ್ ಗಿಫ್ಟ್‌!

‘ಕರಳೆ’ ಸಿನೆಮಾ ತಂಡದಿಂದ ಐ ಫೋನ್ ಉಡುಗೊರೆ

‘ಕರಳೆ’ ಹೆಸರಿನ ಅರ್ಥ ತಿಳಿಸಿದ ಅದೃಷ್ಟಶಾಲಿಗಳ ಹೆಸರು ಪ್ರಕಟಿಸಿದ ವಸಿಷ್ಟ ಸಿಂಹ

ಹೊಸ ಪ್ರಯೋಗದ ಮೂಲಕ ಗಮನ ಸೆಳೆದ ‘ಕರಳೆ’ ಚಿತ್ರತಂಡ 

ಸಾಮಾನ್ಯವಾಗಿ ಸಿನೆಮಾ ನೋಡಿದ ಪ್ರೇಕ್ಷಕರಿಗೆ ಲಕ್ಕಿಡಿಪ್‌ ಮೂಲಕ ಗಿಫ್ಟ್‌ಗಳನ್ನು ಕೊಡುವುದನ್ನು ನೀವೆಲ್ಲ ಕೇಳಿರುತ್ತೀರಿ. ಆದರೆ ಇಲ್ಲೊಂದು ಚಿತ್ರತಂಡ, ತನ್ನ ಟೈಟಲ್‌ ಅರ್ಥವನ್ನು ಸರಿಯಾಗಿ ಹೇಳಿದ ಅದೃಷ್ಟವಂತರಿಗೆ ಐ ಪೋನ್‌ ಗಿಫ್ಟ್‌ ಕೊಟ್ಟಿದೆ! ಹೌದು, ಕೆಲ ತಿಂಗಳ ಹಿಂದಷ್ಟೇ ತನ್ನ ಟೈಟಲ್ ಹಾಗೂ ಪೋಸ್ಟರ್ ಮೂಲಕ ಒಂದಷ್ಟು  ಸುದ್ದಿಯಾಗುತ್ತಿರುವ ‘ಕರಳೆ’ ಚಿತ್ರತಂಡದಿಂದ ಅದೃಷ್ಟಶಾಲಿಗಳಿಗೆ ಐ ಫೋನ್ ಗಿಫ್ಟ್‌ ಸಿಕ್ಕಿದೆ.

ಏನಿದು ಗಿಫ್ಟ್‌ ತಂತ್ರ..? 

‘ಕರಳೆ’ ಚಿತ್ರದ ಪ್ರಚಾರದ ಭಾಗವಾಗಿ ನಡೆಸಿದ್ದ ‘ಕರಳೆ’ ಹೆಸರಿನ ಅರ್ಥ ತಿಳಿಸುವ ಕಂಟೆಸ್ಟ್‌ ಆಯೋಜಿಸಲಾಗಿತ್ತು. ಈ ಕಂಟೆಸ್ಟ್‌ ನಲ್ಲಿ ಭಾಗಿಯಾದ ಅದೃಷ್ಟಶಾಲಿಯನ್ನು ಆಯ್ಕೆ ಮಾಡಿ ಚಿತ್ರತಂಡದಿಂದ ಐ ಫೋನ್ ಗಿಫ್ಟ್ ಕೊಡಲಾಗಿದೆ. ಕನ್ನಡದ ಕಂಚಿನ ಕಂಠ ನಟ ವಸಿಷ್ಟ ಸಿಂಹ ಲಕ್ಕಿಡಿಪ್ ಎತ್ತುವ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದ್ದಾರೆ. ಅಪ್ಪು ದಡ್ಡಿ ಹಾಗೂ ನಂಜರಾಜ್ ಎಂಬ ಇಬ್ಬರು ಅದೃಷ್ಟಶಾಲಿಗಳು ಈ ಕಾಂಟೆಸ್ಟ್ ನಲ್ಲಿ ವಿಜೇತರಾಗಿದ್ದು ಇಬ್ಬರಿಗೆ ಚಿತ್ರತಂಡದಿಂದ ಉಡುಗೊರೆ ಸಿಕ್ಕಿದೆ.

ಈ ಹಿಂದೆ ಕನ್ನಡದಲ್ಲಿ ‘ಕಲಿವೀರ’, ‘ಕನ್ನಡ ದೇಶದೊಳ್’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಅವಿರಾಮ್ ಕಂಠೀರವ ನಿರ್ದೇಶನದಲ್ಲಿ ‘ಕರಳೆ’ ಮೂಡಿ ಬರುತ್ತಿದ್ದು, ಇದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಇದಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಸದ್ಯ ಈ ಚಿತ್ರದ ಅಂತಿಮ ಘಟ್ಟದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದೆ. ‘ಕರಳೆ’ ಕಂಟೆಸ್ಟ್‌ ವಿಜೇತರ ಆಯ್ಕೆ ಸಂದರ್ಭದಲ್ಲಿ ನಟ ವಸಿಷ್ಟ ಸಿಂಹ ಜೊತೆಗೆ ಚಿತ್ರದ ನಿರ್ದೇಶಕ ಅವಿರಾಮ್ ಕಂಠೀರವ, ಚಿತ್ರದ ನಿರ್ಮಾಪಕ ಪಾಲಾಕ್ಷ, ಬಾಲನಟಿ ಶ್ರಿಯಾ, ಸಂಗೀತ ನಿರ್ದೇಶಕ ರಾಘವೇಂದ್ರ ವಿ. ಸೇರಿದಂತೆ ಚಿತ್ರತಂಡದ ಅನೇಕರು ಹಾಜರಿದ್ದರು.

‘ಕರಳೆ’ ಪ್ರಯತ್ನಕ್ಕೆ ಶುಭ ಕೋರಿದ ವಸಿಷ್ಟ ಸಿಂಹ

‘ಕರಳೆ’ ಕಂಟೆಸ್ಟ್‌ ವಿಜೇತರ ಆಯ್ಕೆ ಮಾಡಿ ಮಾತನಾಡಿದ ನಟ ವಸಿಷ್ಟ ಸಿಂಹ, ‘ಒಂದು ಸಿನೆಮಾ ಪ್ರೇಕ್ಷಕರನ್ನು ತಲುಪಬೇಕಿದ್ದರೆ ನಿರ್ಮಾಪಕರ ಜೇಬು ತುಂಬಿ ಮತ್ತಷ್ಟು ಪ್ರಯತ್ನ ಅವರಿಂದ ಆಗಬೇಕಿದ್ದರೆ ಅದರ ಹಿಂದೊಂದು ಗೆಲುವು ಇರಬೇಕು. ಅದು ಕಮರ್ಷಿಯಲ್ ಅಥವಾ ಕ್ರಿಟಿಕ್ಸ್ ಗೆಲುವಾಗಿರಬಹುದು ಒಟ್ಟಾರೆ ಹಣ ಹಾಗೂ ಹೆಸರು ಬಂದಾಗ ನಾವದನ್ನು ಪರಿಪೂರ್ಣ ಗೆಲುವು ಎಂದು ಭಾವಿಸುತ್ತೇವೆ. ಇಂತಹಾ ಗೆಲುವು ಚಿತ್ರರಂಗದ ದಾರಿಯನ್ನು ಬದಲಿಸಬಲ್ಲದು. ಕನ್ನಡ ಚಿತ್ರರಂಗಕ್ಕೆ ಕಳೆದ ಎರಡೂವರೆ ವರ್ಷಗಳಿಂದ ಗೆಲುವಿನ ಕೊರತೆ ಇತ್ತು ಆದರೆ ಈಗ ಹೊಸಬರ ‘ಸು ಫ್ರಂ ಸೋ’ ಭರ್ಜರಿ ಗೆಲುವು ಕಾಣುತ್ತಿದೆ. ಇಂತಹಾ ಕಮರ್ಷಿಯಲ್ ಯಶಸ್ಸು ನಿರ್ಮಾಪಕರಿಗೆ ಮತ್ತಷ್ಟು ಹೊಸ ಬಗೆಯ ಚಿತ್ರಗಳನ್ನು ನಿರ್ಮಿಸಲು ಕಾರಣವಾಗುತ್ತದೆ. ‘ಕರಳೆ’ ಚಿತ್ರತಂಡದ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ’ ಎಂದು ಶುಭ ಹಾರೈಸಿದರು.

ಕನ್ನಡ ಮತ್ತು ಚೈನೀಸ್‌ ಭಾಷೆಯಲ್ಲಿ ‘ಕರಳೆ’ ಚಿತ್ರ ನಿರ್ಮಾಣ…

‘ರಾಗದನಿ ಕ್ರಿಯೇಷನ್ಸ್’ ರವರ ಸಹಯೋಗದಲ್ಲಿ ಚಿತ್ರ ತಯಾರಾಗಿದ್ದು ಸಿನೆಮಾ ಒಂದು ಮಹಿಳಾ ಪ್ರಧಾನ ಕಥೆಯಾಗಿದ್ದು ಸಮಾಜದ ವಾಸ್ತವ ಅಂಶಗಳನ್ನು ಒಳಗೊಂಡಿದೆ. ಎಮೋಷನಲ್, ರಾ, ಮನಕಲಕುವ ದೃಶ್ಯಗಳು ಚಿತ್ರದಲ್ಲಿ ಇರಲಿವೆ. ಇಲ್ಲಿಯವರೆಗೆ ಸಿನೆಮಾ ಕ್ಯಾಮೆರ ಕಾಲಿಡದ ಜಾಗದಲ್ಲಿ ಚಿತ್ರೀಕರಣ ನಡೆದಿರುವ ವಿಶೇಷತೆ ಈ ‘ಕರಳೆ’ ಚಿತ್ರಕ್ಕಿದೆ. ಅಂದಹಾಗೆ, ‘ಕರಳೆ’ ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆಯನ್ನು ಹೊಂದಿದ್ದು, ಹೀಗಾಗಿ ಈ ಚಿತ್ರವನ್ನು ಕನ್ನಡ ಹಾಗೂ ಚೈನೀಸ್ ಭಾಷೆಯಲ್ಲಿ ತೆರೆಗೆ ತರಲು ನಿರ್ದೇಶಕ ಅವಿರಾಮ್ ಕಂಠೀರವ ಸಿದ್ಧತೆ ನಡೆಸುತ್ತಿದ್ದಾರೆ. ‘ಎರಡು ದೇಶಗಳಲ್ಲಿ ನಡೆಯುವ ಘಟನೆಗಳಿಗೆ ಸಾಮ್ಯತೆ ಇರುವ ಕಾರಣ ಕನ್ನಡ ಮತ್ತು ಚೈನೀಸ್ ಭಾಷೆಯಲ್ಲಿ ಈ ಸಿನೆಮಾ ನಿರ್ಮಿಸುತ್ತಿದ್ದೇವೆ. ಇನ್ನೂ ಕನ್ನಡ ಜೊತೆಗೆ ಚೀನಾದಲ್ಲಿ ತಯಾರಾಗುತ್ತಿರುವ ಮೊದಲ ಭಾರತದ ಸಿನೆಮಾ ಎಂಬ ಹೆಗ್ಗಳಿಕೆಗೆ ‘ಕರಳೆ’ ಚಿತ್ರದ ಪಾತ್ರವಾಗಲಿದೆ’ ಎಂಬುದು ಚಿತ್ರತಂಡದ ಮಾತು.

Related Posts

error: Content is protected !!