Street Beat

ಸುಪ್ತ ಮನಸ್ಸಿಗೆ ಕನ್ನಡಿ ಹಿಡಿಯುವ ‘ವಿಕಲ್ಪ’

ತೆರೆಗೆ ಬರಲು ಸಿದ್ಧವಾದ ಹೊಸಬರ ‘ವಿಕಲ್ಪ’

ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿ ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರ

ಮನುಷ್ಯನ ಮನಸ್ಸಿನ ತಲ್ಲಣಗಳ ಮೇಲೊಂದು ಚಿತ್ರ

ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ನೂರಾರು ಸಿನೆಮಾಗಳು ಬಿಡುಗಡೆಯಾಗಿ ತೆರೆಗೆ ಬರುತ್ತಿವೆ. ಆದರೆ ಇಷ್ಟೊಂದು ಸಿನೆಮಾಗಳ ಪೈಕಿ ಸೈಕಾಲಜಿಕಲ್‌ ಥ್ರಿಲ್ಲರ್‌ ಸಿನೆಮಾಗಳ ಸಂಖ್ಯೆ ಮಾತ್ರ ಕೇವಲ ಬೆರಳೆಣಿಕೆಯಷ್ಟು ಮಾತ್ರ ಎಂದೇ ಹೇಳಬಹುದು. ಅಂಥ ಬೆರಳೆಣಿಕೆಯ ವಿರಳ ಸಿನೆಮಾಗಳ ಸಾಲಿಗೆ ಸೇರುವ ಚಿತ್ರವೇ ‘ವಿಕಲ್ಪ’. ಬಹುತೇಕ ಯುವ ಮನಸ್ಸುಗಳೇ ಸೇರಿ ಮಾಡಲು ಹೊರಟಿರುವ ‘ವಿಕಲ್ಪ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ‘ವಿಕಲ್ಪ’ ಒಂದು ಅಪರೂಪದ ಚಿತ್ರವಾಗಿ ನಿಲ್ಲಲಿದೆ ಎಂಬುದು ಚಿತ್ರತಂಡದ ನಿರೀಕ್ಷೆ.

ವಾಸ್ತವ ಮತ್ತು ಭ್ರಮೆಯ ನಡುವಿನ ‘ಚಿತ್ರ’ಣ

‘ವಿಕಲ್ಪ’ ಎಂದರೇನು..? ಎಂಬ ಪ್ರಶ್ನೆಗೆ ಚಿತ್ರತಂಡದ ಉತ್ತರ ಹೀಗಿದೆ… ‘ವಿಕಲ್ಪ’ ಎಂದರೆ, ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದರ್ಥ. ನಮ್ಮ ಚಿತ್ರದ ಶೀರ್ಷಿಕೆಯ ಪ್ರಕಾರ, ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ, ಇದು ಒಂದು ಸಂಪೂರ್ಣ ಥ್ರಿಲ್ಲರ್‌ ಚಿತ್ರ ಎನ್ನುವುದು ವಿಶೇಷ. ಸೈಕಾಲಜಿಕಲ್‌-ಥ್ರಿಲ್ಲರ್‌ ಅಂಶಗಳ ಜೊತೆಗೆ ನವಿರಾದ ಹಾಸ್ಯ ಮತ್ತು ಮನೋರಂಜನೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಇಡೀ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರಕ್ಕೆ ಚಿತ್ರದ ಕಥೆಯೆ ಹೀರೋ. ಇಲ್ಲಿ ಪ್ರತಿ ಪಾತ್ರಗಳೂ ಮಾತನಾಡುತ್ತವೆ. ಪ್ರತಿ ಪಾತ್ರಗಳೂ ನೋಡುಗರ ಮನಮುಟ್ಟುತ್ತವೆ’ ಎಂದು ಹೇಳುತ್ತಾರೆ ‘ವಿಕಲ್ಪ’ ಚಿತ್ರದ ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್.

ಪ್ರಬುದ್ಧ ಪ್ರೇಕ್ಷಕರು ಒಪ್ಪುವಂಥ ಚಿತ್ರ

ಸುಮಾರು ಎರಡು ದಶಕಗಳಿಗೂ ಹೆಚ್ಚಿನ ಕಾಲ ಹವ್ಯಾಸಿ ರಂಗಭೂಮಿಯಲ್ಲಿ ಅನುಭವಪಡೆದಿರುವ, ಪ್ರತಿಷ್ಠಿತ ಬಹುರಾಷ್ಟ್ರೀಯ ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪೃಥ್ವಿರಾಜ್‌ ಪಾಟೀಲ್‌, ತಮ್ಮ ಪರಿಕಲ್ಪನೆಯನ್ನು ‘ವಿಕಲ್ಪ’ ಚಿತ್ರದ ಮೂಲಕ ತೆರೆಮೇಲೆ ತರುತ್ತಿದ್ದಾರೆ. ‘ಸುರೂಸ್‌ ಟಾಕೀಸ್‌’ ಸಂಸ್ಥೆಯ ಅಡಿಯಲ್ಲಿ ಶ್ರೀಮತಿ ಇಂದಿರಾ ಶಿವಸ್ವಾಮಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌ ಅವರೇ ತೆರೆಮೇಲೂ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಒಂದು ಚಿತ್ರಕ್ಕೆ ಕಥೆ ಮತ್ತು ಬರವಣಿಗೆಯೇ ಮುಖ್ಯ ಎಂದು ಅಪೇಕ್ಷಿಸುವ ಕನ್ನಡದ ಎಲ್ಲಾ ಪ್ರಬುದ್ಧ ಚಿತ್ರ ಪ್ರೇಕ್ಷಕರ ಪಾಲಿಗೆ ಈ ಚಿತ್ರ ಒಂದು ಉಡುಗೊರೆಯಾಗಿ ತೆರೆಮೇಲೆ ಮೂಡಿಬರುತ್ತಿದೆ’ ಎಂಬುದು ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌ ಅವರ ವಿಶ್ವಾಸದ ಮಾತು.

ದೇಶ-ವಿದೇಶಗಳಲ್ಲೂ ಚಿತ್ರೀಕರಣ

‘ವಿಕಲ್ಪ’ ಚಿತ್ರದ ಮತ್ತೊಂದು ವಿಶೇಷತೆಯೆಂದರೆ, ಅನೇಕ ನುರಿತ ಮಾನಸಿಕ ವೈದ್ಯರ ಸಲಹೆಯ ಮೇರೆಗೆ ಈ ಚಿತ್ರದ ಹಲವು ಸನ್ನಿವೇಶಗಳನ್ನು ಚಿತ್ರಿಸಲಾಗಿರುವುದು. ಚಿತ್ರದ ದೃಶ್ಯಗಳು ಸಹಜತೆಗೆ ಅತ್ಯಂತ ಹತ್ತಿರವಾಗಿರಬೇಕು ಎಂಬ ಆಶಯದಿಂದ ಚಿತ್ರತಂಡ ಇಂಥದ್ದೊಂದು ಕೆಲಸ ಮಾಡಿದೆ. ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ‘ವಿಕಲ್ಪ’ ಚಿತ್ರದ ಬಹುತೇಕ ಚಿತ್ರೀಕರಣ ನಡಸಲಾಗಿದ್ದು, ಸಿಂಗಪುರ, ನೆದರ್ಲ್ಯಾಂಡ್‌ ಸೇರಿದಂತೆ ವಿದೇಶಗಳಲ್ಲೂ ‘ವಿಕಲ್ಪ’ದ ಚಿತ್ರೀಕರಣ ಮಾಡಲಾಗಿದೆ.

ಹಿರಿ-ಕಿರಿಯ ಪ್ರತಿಭೆಗಳ ಸಮಾಗಮ

‘ವಿಕಲ್ಪ’ ಚಿತ್ರದಲ್ಲಿ ಪೃಥ್ವಿರಾಜ್‌ ಪಾಟೀಲ್‌, ನಾಗಶ್ರೀ ಹೆಬ್ಬಾರ್‌, ಸಂಧ್ಯಾ ವಿನಾಯಕ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್‌ ಬಚ್ಚ್‌, ಪೂಜಾ ಬಚ್ಚ್‌, ಜಯಂತ್‌ ಡೇವಿಡ್‌, ಡಾ. ಪ್ರಕೃತಿ, ಮಾಸ್ಟರ್‌ ಆಯುಷ್ ಸಂತೋಷ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ದ ನಟಿಯರಲ್ಲೊಬ್ಬರಾದ ಹರಿಣಿ ಶ್ರೀಕಾಂತ್‌ ಈ ಚಿತ್ರದ ವಿಭಿನ್ನ ಮತ್ತು ವಿಶೇಷವಾದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಜೊತೆಗೆ ಮಲೆನಾಡಿನ ಪ್ರಸಿದ್ದ ರಂಗಭೂಮಿ ಕಲಾವಿದ ಗಣಪತಿ ಹಿತ್ತಲಕೈ, ಪ್ರಜ್ಞಾ ಗಣಪತಿ, ಮಾಧವ ಶರ್ಮಾ, ಗಿರೀಶ್‌ ಹೆಗಡೆ, ಗಣಪತಿ ಎ. ಆರ್, ‘ರಾಜ್ಯ ಪ್ರಶಸ್ತಿ’ ವಿಜೇತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಮುಂತಾದ ದೊಡ್ಡ ಕಲಾವಿದರ ತಾರಾಗಣವೇ ‘ವಿಕಲ್ಪ’ದಲ್ಲಿರುವುದು ಮತ್ತೊಂದು ವಿಶೇಷ.

ನುರಿತ ತಂತ್ರಜ್ಞರ ಕೈಯಲ್ಲಿ ಅರಳಿದ ಚಿತ್ರ

ಇನ್ನು ‘ವಿಕಲ್ಪ’ ಚಿತ್ರಕ್ಕೆ ಮಿಥುನ್‌ ತೀರ್ಥಹಳ್ಳಿ ಸಹ ನಿರ್ದೇಶನ ಮಾಡಿದ್ದಾರೆ. ‘ವಿಕಲ್ಪ’ ಸುಂದರ ದೃಶ್ಯಗಳನ್ನು ಅಭಿರಾಮ್‌ ಗೌಡ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರೆ, ದಕ್ಷಿಣ ಭಾರತದ ಖ್ಯಾತ ಸಂಕಲನಕಾರ ಸುರೇಶ್‌ ಆರುಮುಗಮ್‌ ಚಿತ್ರಕ್ಕೆ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ‘ವಿಕಲ್ಪ’ದ ವಿಭಿನ್ನ ಹಾಡುಗಳಿಗೆ ಸಂವತ್ಸರ ಸಂಗೀತ ಸಂಯೋಜಿಸಿದ್ದು, ಪೃಥ್ವಿರಾಜ್‌ ಪಾಟಿಲ್‌ ಮತ್ತು ಕೌಂಡಿನ್ಯ ಕುಡ್ಲುತೋಟ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸಿದ್ದಾರ್ಥ್‌ ಬೆಳ್ಮಣ್ಣು, ಸಂವತ್ಸರ, ಶ್ರೀರಂಜಿನಿ, ಇಂಚರ ಮೊದಲಾದ ಗಾಯಕರ ಧ್ವನಿಯಲ್ಲಿ ‘ವಿಕಲ್ಪ’ದ ಹಾಡುಗಳು ಮೂಡಿಬಂದಿವೆ. ಸದ್ಯ ‘ವಿಕಲ್ಪ’ದ ಚಿತ್ರೀಕರಣ ಮುಕ್ತಾಯಗೊಂಡು, ಚಿತ್ರದ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ.

ಶೀಘ್ರದಲ್ಲಿಯೇ ಸೀಟ್‌ ಎಡ್ಜ್‌ನಲ್ಲಿ ಕೂರಿಸುವ ‘ವಿಕಲ್ಪ’ ತೆರೆಗೆ

”ವಿಕಲ್ಪ’ ಚಿತ್ರದ ನಿರೂಪಣೆ, ಅತ್ಯುತ್ತಮ ಬರವಣಿಗೆ, ಸೀಟ್‌ ಎಡ್ಜಿಗೆ ಕೂರಿಸುವಂತಹ ಥ್ರಿಲ್ಲಿಂಗ್ ಚಿತ್ರಕಥೆ, ತೀರಾ ಆತ್ಮೀಯರು ಎನಿಸುವಂತಹ ನೈಜ ಪಾತ್ರಗಳು, ಕಚಗುಳಿ ಇಡುವ ನೈಜ ಹಾಸ್ಯ, ಕಲ್ಟ್‌ ಹಾಡುಗಳು, ಹೀಗೆ ಒಂದಷ್ಟು ಹೊಸ ವಿಚಾರಗಳನ್ನು ನಿಜವಾಗಿಯೂ ಹೊಸತನ ಬಯಸುವ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ‘ವಿಕಲ್ಪ’ ಚಿತ್ರತಂಡವು ತೀರಾ ವಿನಯ ಮತ್ತು ಜವಾಬ್ದಾರಿಯಿಂದ ಪ್ರೇಕ್ಷಕರನ್ನು ರಂಜಿಸುವ ಆತ್ಮವಿಶ್ವಾಸವನ್ನು ಹೊಂದಿದೆ. ಆದಷ್ಟು ಬೇಗ ‘ವಿಕಲ್ಪ’ವನ್ನು ಪ್ರೇಕ್ಷಕರ ಮುಂದೆ ತರಲು ಕಾತುರರಾಗಿದ್ದೇವೆ’ ಎಂಬುದು ಚಿತ್ರದ ನಿರ್ದೇಶಕ ಕಂ ನಟ ಪೃಥ್ವಿರಾಜ್‌ ಪಾಟೀಲ್‌ ಮತ್ತು ಚಿತ್ರತಂಡದ ಒಕ್ಕೊರಲ ಮಾತು.

Related Posts

error: Content is protected !!