ಕಮಲ್ ‘ಥಗ್ ಲೈಫ್’ ಸಿನೆಮಾಕ್ಕೆ ‘ಸುಪ್ರೀಂ’ನಲ್ಲಿ ‘ಬಿಗ್ ರಿಲೀಫ್’

ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರದ ಬಿಡುಗಡೆಗೆ ‘ಸರ್ವೋಚ್ಚ’ ಅನುಮತಿ
ಬಾಕ್ಸಾಫೀಸ್ನಲ್ಲಿ ‘ಥಗ್ ಲೈಫ್’ ಸೋತರೂ, ಕಾನೂನು ಹೋರಾಟದಲ್ಲಿ ಗೆದ್ದ ‘ಸಕಲ ಕಲಾವಲ್ಲಭ’
‘ಥಗ್ ಲೈಫ್’ ವಿರುದ್ದದ ಪ್ರತಿಭಟನೆಗೆ ‘ಸುಪ್ರೀಂ ಕೋರ್ಟ್’ ಅಸಮಾಧಾನ
ಬೆಂಗಳೂರು: ಕಮಲ್ ಹಾಸನ್ ಅವರ ಭಾಷಾ ಹೇಳಿಕೆ ವಿರೋಧಿಸಿ, ಕರ್ನಾಟಕದಲ್ಲಿ ಅವರ ನಟನೆಯ ‘ಥಗ್ ಲೈಫ್’ ಸಿನೆಮಾದ ವಿರುದ್ಧ ಅಘೋಷಿತ ನಿಷೇಧ ಹೇರಲಾಗಿತ್ತು. ಈ ಬಗ್ಗೆ ಕಮಲ್ ಹಾಸನ್ ಪರ ವಕೀಲರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ರಾಜ್ಯದಲ್ಲಿ ‘ಥಗ್ ಲೈಫ್’ ಸಿನೆಮಾ ಬಿಡುಗಡೆಗೆ ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
‘ಥಗ್ ಲೈಫ್’ ತಡೆ ಮುಕ್ತ…
ಕನ್ನಡ ಭಾಷೆಯ ಬಗ್ಗೆ ನಟ ಕಮಲ್ ಹಾಸನ್ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ, ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನೆಮಾವನ್ನು ಬಿಡುಗಡೆ ಮಾಡದಂತೆ ತಡೆಯಲಾಗಿತ್ತು. ಕಮಲ್ ಹಾಸನ್ ಪರ ವಕೀಲರು ಈ ಬಗ್ಗೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರಾದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಆ ಬಳಿಕ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ಆಲಿಸಿದ ಸುಪ್ರೀಂಕೋರ್ಟ್, ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನೆಮಾ ಬಿಡುಗಡೆಗೆ ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
‘ಥಗ್ ಲೈಫ್’ ತಡೆಗೆ ಸುಪ್ರೀಂ ಕೋರ್ಟ್ ಗರಂ!
‘ಗೂಂಡಾಗಳ ಗುಂಪು, ಯಾವ ಸಿನಿಮಾ ಪ್ರದರ್ಶಿಸಬೇಕು, ಯಾವುದನ್ನು ಪ್ರದರ್ಶಿಸಬಾರದು ಎಂದು ನಿರ್ಧರಿಸಲಾಗದು’ ಎಂದು ಕಠಿಣ ಪದಗಳಲ್ಲಿಯೇ ಹೇಳಿದೆ ಸುಪ್ರೀಂಕೋರ್ಟ್. ‘ಯಾರಾದರೂ ಒಂದು ಹೇಳಿಕೆ ನೀಡಿದರೆ ನೀವು ಅದಕ್ಕೆ ವಿರುದ್ಧವಾದ ಹೇಳಿಕೆ ನೀಡಿ, ಆದರೆ ಚಿತ್ರಮಂದಿರಗಳನ್ನು ಸುಟ್ಟು ಹಾಕುತ್ತೀವೆ ಎಂದು ಬೆದರಿಸುವುದು ಕಾನೂನಿಗೆ ವಿರುದ್ಧ. ಕಮಲ್ ಹಾಸನ್ ಹೇಳಿಕೆಯನ್ನು ಒಪ್ಪುವುದು ಒಪ್ಪದೇ ಇರುವುದು ಕರ್ನಾಟಕದ ಜನರಿಗೆ ಬಿಟ್ಟ ವಿಷಯ ಆದರೆ ಮೂಲಭೂತ ಹಕ್ಕುಗಳ ರಕ್ಷಣೆ ಆಗಲೇಬೇಕು’ ಎಂದಿದೆ.
ಕ್ಷಮೆ ಕೇಳುವಂತೆ ಹೇಳುವುದು ಹೈಕೋರ್ಟ್ನ ಕೆಲಸವಲ್ಲ..
‘ಬೆಂಗಳೂರಿನ ಜಾಗೃತ ಜನತೆಗೆ ಕಮಲ್ ಹಾಸನ್ ಹೇಳಿಕೆ ತಪ್ಪು ಎನಿಸಿದಾದಲ್ಲಿ, ಯಾವುದು ಸರಿಯೋ ಅದನ್ನು ಹೇಳಲಿ. ಆದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆಂದು ಬೆದರಿಸುವುದು ಏಕೆ?’ ಎಂದು ಸುಪ್ರೀಂ ಪ್ರಶ್ನಿಸಿದೆ. ರಾಜ್ಯ ಹೈಕೋರ್ಟ್ ಸೂಚನೆಯನ್ನು ಟೀಕೆ ಮಾಡಿರುವ ಸುಪ್ರೀಂಕೋರ್ಟ್, ‘ವ್ಯವಸ್ಥೆಯಲ್ಲೇ ತಪ್ಪಿದೆ ಎನಿಸುತ್ತದೆ. ಒಬ್ಬ ವ್ಯಕ್ತಿ ತಪ್ಪು ಹೇಳಿಕೆ ನೀಡಿದ್ದಾರೆ, ಆದರೆ ಎಲ್ಲರೂ ಒಟ್ಟಾಗಿ ಅದರ ವಿರುದ್ಧ ನಿಂತಂತೆ ಕಾಣುತ್ತಿದೆ. ಕ್ಷಮೆ ಕೇಳು ಎಂದು ಹೈಕೋರ್ಟ್ ಹೇಳುತ್ತಿದೆ, ಅದು ಹೈಕೋರ್ಟ್ನ ಕೆಲಸ ಅಲ್ಲ’ ಎಂದಿದೆ.
ಭಿನ್ನ ಅಭಿಪ್ರಾಯದ ಕಾರಣಕ್ಕೆ ನಿಷೇಧ ಹೇರುವುದು ಪ್ರಜಾಪ್ರಭುತ್ವಕ್ಕೆ ವಿರೋಧ
‘ಯಾವುದೇ ಸಿನೆಮಾ ಸಿಬಿಎಫ್ಸಿಯಿಂದ ಪ್ರಮಾಣ ಪತ್ರ ಪಡೆದಿದೆ ಎಂದರೆ ಅದು ಬಿಡುಗಡೆ ಆಗಬೇಕು. ಆ ಸಿನೆಮಾವನ್ನು ನೋಡಬೇಕೆ ಬೇಡವೆ ಎಂಬುದನ್ನು ಜನ ನಿರ್ಧಾರ ಮಾಡುತ್ತಾರೆ. ಆದರೆ ಒತ್ತಾಯಪೂರ್ವಕವಾಗಿ ಅದನ್ನು ಬಿಡುಗಡೆ ಮಾಡದಂತೆ ತಡೆಯುವುದು ಸೂಕ್ತ ಅಲ್ಲ. ‘ಮಿ ನಾಥೂರಾಮ್ ಬೋಲ್ಟೋಯ್’ ನಾಟಕ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ಭಿನ್ನ ಅಭಿಪ್ರಾಯದ ಕಾರಣಕ್ಕೆ ನಿಷೇಧ ಹೇರುವುದು ಪ್ರಜಾಪ್ರಭುತ್ವಕ್ಕೆ ವಿರೋಧ’ ಎಂದಿದೆ.
ಬಾಕ್ಸಾಫೀಸ್ನಲ್ಲಿ ಸೋತು, ಕೋರ್ಟ್ನಲ್ಲಿ ಗೆದ್ದ ‘ಥಗ್ ಲೈಫ್’ ಕಥೆ ಮುಂದೇನು..?
ಸದ್ಯ ಸುಪ್ರೀಂಕೋರ್ಟ್ ಆದೇಶದಂತೆ, ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನೆಮಾದ ಬಿಡುಗಡೆಗೆ ಇದ್ದ ಅಡ್ಡಿ, ಆತಂಕಗಳು ನಿವಾರಣೆಯಾಗಿದೆ. ಆದರೆ ‘ಥಗ್ ಲೈಫ್’ ಸಿನೆಮಾ ಈಗಾಗಲೇ ಕರ್ನಾಟಕದ ಹೊರಗೆ ಬಿಡುಗಡೆಯಾಗಿ ಹೀನಾಯವಾಗಿ ಸೋತಿದೆ. ಹೀಗಾಗಿ ಚಿತ್ರತಂಡ, ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನೆಮಾವನ್ನು ಬಿಡುಗಡೆ ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕು. ಹಾಗೇನಾದರೂ, ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನೆಮಾವನ್ನು ಚಿತ್ರತಂಡ ಬಿಡುಗಡೆ ಮಾಡಲು ನಿರ್ಧರಿಸಿದರೆ, ‘ಥಗ್ ಲೈಫ್’ ಸಿನೆಮಾ ಬಿಡುಗಡೆಯಾಗಲಿರುವ ಚಿತ್ರಮಂದಿರಗಳಿಗೆ ರಾಜ್ಯ ಸರ್ಕಾರ ಅನಿವಾರ್ಯವಾಗಿ ಪೊಲೀಸ್ ಭದ್ರತೆ ಒದಗಿಸಬೇಕಾಗಲಿದೆ.