ಕನ್ನಡದ ಹಿರಿಯ ಖಳನಟ ಹರೀಶ್ ರಾಯ್ ನಿಧನ
ಬೆಂಗಳೂರು, ನ. 06; ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಖಳ ನಟನಾಗಿ, ಪೋಷಕ ನಟನಾಗಿ ಅಭಿನಯಿಸಿ ಖ್ಯಾತಿ ಗಳಿಸಿದ್ದ ಹಿರಿಯ ನಟ ಹರೀಶ್ ರಾಯ್ ಇಂದು (6 ನವೆಂಬರ್ 2025) ರಂದು ನಿಧನರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ರಾಯ್, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು. ಹರೀಶ್ ರಾಯ್ ಅವರು ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಹರೀಶ್ ರಾಯ್ ಬದುಕಿಸುವ ಪ್ರಯತ್ನ ಯಶಸ್ವಿಯಾಗಲಿಲ್ಲ…
ಹರೀಶ್ ರಾಯ್ ಅವರು ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಹೊಟ್ಟೆ ಉಬ್ಬರಗೊಂಡು, ದೇಹವೆಲ್ಲ ಕೃಷಗೊಂಡು ಗುರುತೇ ಸಿಗದಂತೆ ಆಗಿದ್ದರು. ತಮ್ಮ ಚಿಕಿತ್ಸೆಗಾಗಿ ಅವರು ಸಹಾಯವನ್ನು ಸಹ ಅಂಗಲಾಚಿದ್ದ ಹರೀಶ್ ರಾಯ್ ಅವರಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗ, ನಟ ಯಶ್ ಸೇರಿದಂತೆ ಇನ್ನು ಹಲವಾರು ಮಂದಿ ನಟ, ನಟಿಯರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ಚಿತ್ರರಂಗದ ಅನೇಕರು ಹರೀಶ್ ರಾಯ್ ಅವರನ್ನು ಸಂತೈಸಿ, ತಾವು ಜೊತೆಗೆ ಇರುವುದಾಗಿ ಭರವಸೆ ನೀಡಿದ್ದರು. ಕಳೆದ ಕೆಲ ತಿಂಗಳುಗಳಿಂದಲೂ ಸತತವಾಗಿ ಚಿಕಿತ್ಸೆಯನ್ನು ಪಡೆಯುತ್ತಲೇ ಇದ್ದರು ಹರೀಶ್ ರಾಯ್, ಇದೀಗ ಕೊನೆಗೆ ನಿಧನ ಹೊಂದಿದ್ದಾರೆ. 
ಕರಾವಳಿಯ ಪ್ರತಿಭೆ ಹರೀಶ್ ರಾಯ್
ಹರೀಶ್ ರಾಯ್ ಅವರ ಮೂಲ ಹೆಸರು ಹರೀಶ್ ಆಚಾರ್ಯ. ಉಡುಪಿಯ ಅಂಬಲಪಾಡಿ ಹರೀಶ್ ಅವರ ಹುಟ್ಟೂರು. ಕರಾವಳಿ ಮೂಲದ ಹರೀಶ್ ರಾಯ್ 90ರ ದಶಕದ ಹಲವಾರು ಸಿನೆಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದಾರೆ. ಅಸಲಿಗೆ ನಿಜ ಜೀವನದಲ್ಲಿಯೂ ಸಹ ಪ್ರಕರಣ ಒಂದರಲ್ಲಿ ಹರೀಶ್ ರಾಯ್ ಅವರು ಜೈಲು ಪಾಲಾಗಿದ್ದರು. ದರ್ಶನ್ ಜೈಲಿಗೆ ಹೋದ ಸಂದರ್ಭದಲ್ಲಿ ಹರೀಶ್ ರಾಯ್, ತಮ್ಮ ಜೈಲು ದಿನಗಳನ್ನು ನೆನಸಿಕೊಂಡು ಕಣ್ಣೀರು ಹಾಕಿದ್ದರು.
ಹರೀಶ್ ರಾಯ್ ಅವರು ಕನ್ನಡ ಮಾತ್ರವಲ್ಲದೆ ತಮಿಳು ಸಿನೆಮಾಗಳಲ್ಲಿಯೂ ನಟಿಸಿದ್ದರು. ʼಅಂಡರ್ ವರ್ಲ್ಡ್ʼ, ʼಮೀಂದುಮ್ ಒರು ಕಾದಲ್ ಕಧೈʼ, ʼರಾಜ್ ಬಹದ್ದೂರ್ʼ, ʼಸಂಜು ವೆಡ್ಸ್ ಗೀತಾʼ, ʼಸ್ವಯಂವರʼ, ʼಭೂಗತʼ, ʼನನ್ನ ಕನಸಿನ ಹೂವೆʼ, ʼನಲ್ಲʼ, ʼಜಾಫರ್ ಅಲಿಯಾಸ್ ಮುರ್ಗಿ ಜಾಫರ್ʼ, ʼಜೋಡಿ ಹಕ್ಕಿʼ, ʼತಾಯವ್ವʼ, ʼಓಂʼ ಹಾಗೂ ಸ್ಯಾಂಡಲ್ವುಡ್ನ ಸೂಪರ್ ಹಿಟ್ ʼಕೆಜಿಎಫ್ ಚಾಪ್ಟರ್ 1ʼ ಹಾಗೂ ʼಕೆಜಿಎಫ್ ಚಾಪ್ಟರ್ 2ʼ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.
ಉಡುಪಿಯಲ್ಲಿ ಹರೀಶ್ ರಾಯ್ ಅಂತ್ಯಕ್ರಿಯೆ
ಬೆಂಗಳೂರಿನಲ್ಲಿ ವಾಸವಾಗಿದ್ದ ಹರೀಶ್ ರಾಯ್ ಅವರು ಮೂಲತಃ ಉಡುಪಿಯ ಅಂಬಲಪಾಡಿಯವರು. ಹಾಗಾಗಿ, ಉಡುಪಿಯ ಅಂಬಲಪಾಡಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲು ಕುಟುಂಬ ವರ್ಗ ನಿರ್ಧರಿಸಿದೆ. ನ. 6 ರ ಮಧ್ಯಾಹ್ನ ಬೆಂಗಳೂರಿನ ನಿವಾಸದಿಂದ ಹರೀಶ್ ರಾಯ್ ಅವರ ಪಾರ್ಥಿವ ಶರೀರ ಉಡುಪಿಗೆ ರವಾನೆ ಆಗಲಿದ್ದು, ಉಡುಪಿಯ ಅಂಬಲಪಾಡಿಯಲ್ಲಿ ಅವರ ಅಂತ್ಯಕ್ರಿಯೆ ಮರುದಿನ ಶುಕ್ರವಾರ (ನವೆಂಬರ್ 7) ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಅಂಬಲಪಾಡಿಯಲ್ಲಿ ಇರುವ ಮನೆಯಲ್ಲಿ ಹರೀಶ್ ಅವರ ತಾಯಿ ಮತ್ತು ಸಹೋದರ ವಾಸವಾಗಿದ್ದಾರೆ.















