ಧ್ರುವ ಸರ್ಜಾ ಹೊಸಚಿತ್ರ ‘ಕ್ರಿಮಿನಲ್’ಗೆ ಮುಹೂರ್ತ
ಧ್ರುವ ಸರ್ಜಾ ಹೊಸಚಿತ್ರ ‘ಕ್ರಿಮಿನಲ್’ಗೆ ಮುಹೂರ್ತ
ಧ್ರುವ ಸರ್ಜಾ ಅಭಿನಯದ ಏಳನೇ ಚಿತ್ರ ‘ಕ್ರಿಮಿನಲ್’ಗೆ ರಚಿತಾ ರಾಮ್ ಜೋಡಿ
ಸೆಟ್ಟೇರಿತು ಉತ್ತರ ಕರ್ನಾಟಕದ ಕಥೆಯ ‘ಕ್ರಿಮಿನಲ್’ ಹೊಸ ಚಿತ್ರ
‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅಭಿನಯದ ಹೊಸಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಧ್ರುವ ಸರ್ಜಾ ಅಭಿನಯಿಸುತ್ತಿರುವ ಹೊಸಚಿತ್ರಕ್ಕೆ ‘ಕ್ರಿಮಿನಲ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಹೊಸಚಿತ್ರ ಅದ್ಧೂರಿಯಾಗಿ ಸೆಟ್ಟೇರಿದೆ. ಬೆಂಗಳೂರಿನ ಬಸವನಗುಡಿಯ ‘ಅನ್ನಪೂರ್ಣ ನವಮಂತ್ರಾಲಯ ಮಂದಿರ’ದಲ್ಲಿ ‘ಕ್ರಿಮಿನಲ್’ ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಇನ್ನು ‘ಕ್ರಿಮಿನಲ್’ ಧ್ರುವ ಸರ್ಜಾ ನಾಯಕ ನಟನಾಗಿ ಅಭಿನಯಿಸುತ್ತಿರುವ ಏಳನೇ ಚಿತ್ರವಾಗಿದ್ದು, ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿರುವ ‘ಕ್ರಿಮಿನಲ್’ ಚಿತ್ರ ನೈಜ ಘಟನೆ ಆಧರಿಸಿದ್ದು, ಉತ್ತರ ಕರ್ನಾಟಕ ಸೊಗಡಿನಲ್ಲಿ ಈ ಚಿತ್ರ ಮೂಡಿಬರುತ್ತಿದೆ. 
ರಾಜ್ ಗುರು ನಿರ್ದೇಶನದಲ್ಲಿ ಮೂಡಿಬರಲಿರುವ ‘ಕ್ರಿಮಿನಲ್’
ಈ ಹಿಂದೆ ‘ಕೆರೆಬೇಟೆ’ ಚಿತ್ರವನ್ನು ನಿರ್ದೇಶನ ಮಾಡಿರುವ ರಾಜ್ ಗುರು ‘ಕ್ರಿಮಿನಲ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಕ್ರಿಮಿನಲ್’ ಚಿತ್ರದ ಮುಹೂರ್ತದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ರಾಜ್ ಗುರು, ‘ಈ ಚಿತ್ರದ ಕಥೆ ಹೇಳಿ ನಟ ಧ್ರುವ ಸರ್ಜಾ ಒಪ್ಪಿಕೊಂಡರು. ಬಳಿಕ ಅವರೊಂದಿಗೆ ಸೆಲ್ಫಿ ತೆಗೆದುಕೊಂಡೆ. ಈ ಸೆಲ್ಫಿ ನೋಡಿ ಖುಷಿ ಜೊತೆ ಭಯ ಶುರುವಾಯ್ತು. ಇದು ಜವಾಬ್ದಾರಿ ಎಂಬ ಭಯ. ಉತ್ತರ ಕರ್ನಾಟಕದ ಬಗ್ಗೆ ಸಿನೆಮಾ ಮಾಡುತ್ತಿದ್ದೇವೆ. ಇಂಥದ್ದೊಂದು ಸಿನೆಮಾಕ್ಕೆ ದೊಡ್ಡ ಪ್ರೊಡಕ್ಷನ್ ಕಂಪನಿ ನನಗೆ ಅವಕಾಶ ಕೊಟ್ಟಿದೆ. ನನ್ನ ಎರಡನೇ ಸಿನೆಮಾ ಇದಾಗಿದ್ದು, ಇದಕ್ಕೆ ಎಲ್ಲರ ಬೆಂಬಲ ಇರಲಿ’ ಎಂದರು.
ರಚಿತಾಗೆ ಮತ್ತೊಮ್ಮೆ ಧ್ರುವ ಸರ್ಜಾ ಚಿತ್ರದಲ್ಲಿ ಜೋಡಿಯಾದ ಖುಷಿ
‘ಕ್ರಿಮಿನಲ್’ ಚಿತ್ರದ ಮುಹೂರ್ತದ ಬಳಿಕ ಮಾತನಾಡಿದ ನಾಯಕ ನಟಿ ರಚಿತಾ ರಾಮ್, ”ಭರ್ಜರಿ’ ಸಿನೆಮಾದ ನಂತರ ಸುಮಾರು ಎಂಟು ವರ್ಷಗಳ ನಂತರ ನನ್ನ ಒಳ್ಳೆ ಫ್ರೆಂಡ್ ಧ್ರುವ ಜೊತೆ ಸಿನೆಮಾ ಮಾಡುತ್ತಿರುವುದು ಖುಷಿ ಆಗ್ತಿದೆ. ಹೊಸ ತಂಡದ ಕೆಲಸ ಮಾಡುತ್ತಿರುವುದು ಖುಷಿ ಇದೆ. ಫಸ್ಟ್ ನನಗೆ ಧ್ರುವ ಕಾಲ್ ಮಾಡಿದರು. ಕಥೆ, ಪ್ರೊಡಕ್ಷನ್ ಹೌಸ್ ಏನೂ ಕೇಳಲಿಲ್ಲ. ಓಕೆ ಮಾಡ್ತೀನಿ ಎಂದೆ. ಆಮೇಲೆ ನಿರ್ದೇಶಕರು ಮನೆಗೆ ಬಂದು ಕಥೆ ಹೇಳಿದರು. ತುಂಬಾ ಎಕ್ಸ್ ಪಿರಿಮೇಂಟ್ ರೋಲ್ ನ ಧ್ರುವ ಮಾಡುತ್ತಿದ್ದಾರೆ. ಇದು ಅವರ ಸಿನಿಕರಿಯರ್ ನ ಬೆಸ್ಟ್ ಚಿತ್ರವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಹಾನಗಲ್ನಲ್ಲಿ ನಡೆದ ನೈಜ ಘಟನೆಗೆ ಚಿತ್ರ ರೂಪ…
‘ಕ್ರಿಮಿನಲ್’ ಚಿತ್ರದ ನಾಯಕ ನಟ ಧ್ರುವ ಸರ್ಜಾ ಮಾತನಾಡಿ, ‘ಉತ್ತರ ಕರ್ನಾಟಕ ಹಾವೇರಿಯ ಹಾನಗಲ್ ನಲ್ಲಿ ನಡೆದ ಪ್ರೇಮ ಕಥೆಯಾಧಾರಿತ ಸಿನೆಮಾ ಇದಾಗಿದೆ. 99% ಸ್ಟೋರಿ ಏನಿದೆ ಅದೇ ತರ ಶೂಟ್ ಮಾಡ್ತೀವಿ. ‘ಭರ್ಜರಿ’ ಸಿನೆಮಾದಲ್ಲಿ ತಾಯಿ ಆದ ನಂತರ ತಾರಮ್ಮ ಮತ್ತೆ ಈ ಸಿನೆಮಾದಲ್ಲೂ ಅಮ್ಮನಾಗಿ ಕಾಣಿಸಿಕೊಳ್ತಿದ್ದಾರೆ. ಕಥೆ ಕೇಳಿದ ಮೇಲೆ ರಚಿತಾಗೆ ಹೇಳ್ದೆ ಅವರು ಕೂಡಾ ಒಪ್ಪಿಕೊಂಡ್ರು. ಇದು ತುಂಬಾನೇ ಯುನಿಕ್ ಸಬ್ಜೆಕ್ಟ್. ಇಡಿ ಸಿನೆಮಾ ಉತ್ತರ ಕರ್ನಾಟಕದ ಭಾಷೆಯಲ್ಲೇ ಇರುತ್ತೆ ಅದಕ್ಕಾಗಿ ತಯಾರಿ ಮಾಡಿಕೊಳ್ತಿದ್ದೀನಿ’ ಎಂದು ಕಥೆಯ ಬಗ್ಗೆ ವಿವರಣೆ ನೀಡಿದರು.
ಪಂಚ ಭಾಷೆಗಳಲ್ಲಿ ತೆರೆಗೆ ಬರಲಿದ್ದಾನೆ ‘ಕ್ರಿಮಿನಲ್’
‘ಗೋಲ್ಡ್ ಮೈನ್ಸ್ ಟೆಲಿಫಿಲಂಸ್’ ಬ್ಯಾನರಿನಲ್ಲಿ ನಿರ್ಮಾಪಕ ಮನೀಶ್ ‘ಕ್ರಿಮಿನಲ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನೆಮಾ ತೆರೆಗೆ ಬರಲಿದೆ. ‘ಕ್ರಿಮಿನಲ್’ ಚಿತ್ರದ ಹಾಡುಗಳಿಗೆ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ವೈದಿ ಛಾಯಾಗ್ರಹಣವಿದ್ದು, ರವಿವರ್ಮ, ವಿಕ್ರಂ ಮೋರ್ ಸಾಹಸ ಸಂಯೋಜಿಸುತ್ತಿದ್ದಾರೆ. ‘ಕ್ರಿಮಿನಲ್’ ಚಿತ್ರದಲ್ಲಿ ಹಳ್ಳಿಹೈದನಾಗಿ ಶಿವ ಎಂಬ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಪಾರ್ವತಿ ಎಂಬ ಹುಡುಗಿಯಾಗಿ ರಚಿತಾ ರಾಮ್ ಬಣ್ಣ ಹಚ್ಚಿದ್ದಾರೆ. ‘ಕ್ರಿಮಿನಲ್’ ಚಿತ್ರದ ಮುಹೂರ್ತ ಸಮಾರಂಭದ ಮೊದಲ ದೃಶ್ಯದಲ್ಲಿ ನಾಯಕಿಯ ಜುಟ್ಟು ಹಿಡಿದು ನಾಯಕ ಮಾತನಾಡುವ ಸನ್ನಿವೇಶ ಸೆರೆಹಿಡಿಯಲಾಯಿತು.















