ನಾಯಕನಾಗಿ ‘ಹೊಸ ಜೀವನ’ಕ್ಕೆ ಕಾಲಿಡುತ್ತಿರುವ ರಂಗಾಯಣ ರಘು!
‘ಹೊಸ ಜೀವನ’ ಚಿತ್ರದ ಶೀರ್ಷಿಕೆ ಅನಾವರಣ
ರಂಗಾಯಣ ರಘು ಅಭಿನಯದ 400ನೇ ಸಿನೆಮಾದ ಟೈಟಲ್ ಲಾಂಚ್…
‘ಹೊಸ ಜೀವನ’ ಸಿನೆಮಾಕ್ಕೆ ಡಾಲಿ ಧನಂಜಯ್ ಸಾಥ್
ಕನ್ನಡ ಚಿತ್ರರಂಗದಲ್ಲಿ ಸಹ ನಟನಾಗಿ, ಖಳ ನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ, ನಾಯಕ ನಟನಾಗಿ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ನಟ ರಂಗಾಯಣ ರಘು, ಸದ್ದಿಲ್ಲದೆ 399 ಸಿನೆಮಾಗಳನ್ನು ಪೂರೈಸಿ, ಇದೀಗ 400ನೇ ಸಿನೆಮಾಕ್ಕೆ ತಯಾರಾಗಿದ್ದಾರೆ. ಹೌದು, ರಂಗಾಯಣ ರಘು ಅಭಿನಯಿಸುತ್ತಿರುವ 400ನೇ ಸಿನೆಮಾಕ್ಕೆ ‘ಹೊಸ ಜೀವನ’ ಎಂದು ಹೆಸರಿಡಲಾಗಿದ್ದು,
ಈ ಚಿತ್ರದಲ್ಲಿ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.
ಡಾಲಿ ಕೈಯಿಂದ ಹೊರಬಂತು ರಂಗಾಯಣ ರಘು 400ನೇ ಚಿತ್ರದ ಪೋಸ್ಟರ್
‘ತಲೆ ಬಾಚ್ಕೊಳಿ… ಪೌಡ್ರು ಹಾಕೊಳಿ… ದುನಿಯಾ ತುಂಬಾ ಕಾಸ್ಟ್ಲಿ…’ ಅಂತ ಡೈಲಾಗ್ ಹೊಡೆದು ಕನ್ನಡ ಚಿತ್ರರಂಗದಲ್ಲಿ ಏಕ್ದಂ ಸ್ಟಾರ್ ಪಟ್ಟಕ್ಕೆ ಏರಿದ ಪೋಷಕ ನಟ ರಂಗಾಯಣ ರಘು ಅವರ 400ನೇ ಚಿತ್ರ ‘ಹೊಸ ಜೀವನ’ಕ್ಕೆ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗೆ ‘ನಟ ರಾಕ್ಷಸ’ ಡಾಲಿ ಧನಂಜಯ್ ‘ಹೊಸ ಜೀವನ’ ಚಿತ್ರದ ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ಒಂದಷ್ಟು ಕಿರುಚಿತ್ರಗಳ ನಿರ್ದೇಶನ ಮಾಡಿರುವ ಮೋಹನ್ ಕುಮಾರ್ ಹನುಮಯ್ಯ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಹೊಂದಿದ್ದಾರೆ. ಇವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ‘ಹೊಸ ಜೀವನ’ ಸಿನಿಮಾದಲ್ಲಿ ರಂಗಾಯಣ ರಘು, ಪ್ರಭು ಮುಂಡ್ಕೂರ್, ಸ್ವಾತಿ ಮುಪ್ಪಾಲ, ಅಚ್ಯುತ್ ಕುಮಾರ್, ಶಿವರಾಜ್ ಕೆ. ಆರ್. ಪೇಟೆ, ಸುಹಾಸ್ ಅತ್ರೆಯಸ್, ಅಭಿ ಸಾಮ್ರಾಟ್, ಉದಯ್ ಆಚಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಜಿ. ಎಸ್. ಸಂಜೀವ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿರುವುದರ ಹೊರತಾಗಿ ಮೋಹನ್ ಕುಮಾರ್ ಹನುಮಯ್ಯ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ‘ಅರ್ಜುನ್ ಪ್ರೊಡಕ್ಷನ್’ ಹಾಗೂ ‘ಚಿರು ಪ್ರೊಡಕ್ಷನ್’ ಒಟ್ಟಿಗೆ ಸೇರಿ ಚಿತ್ರ ನಿರ್ಮಾಣ ಮಾಡ್ತಿವೆ.
‘ಹೊಸ ಜೀವನ’ ಸಿನಿಮಾಗೆ ಸುಮುಖ ರಾವ್ ಸಂಗೀತ ನಿರ್ದೇಶನ ಮಾಡಿದ್ದು, ಸುನಾದ್ ಗೌತಮ್ ಹಿನ್ನೆಲೆ ಸಂಗೀತ ಒದಗಿಸಿದ್ದು, ಸಂಕಲನದ ಜವಾಬ್ದಾರಿಯನ್ನು ಶಶಿಧರ್ ಗೌಡ ನಿಭಾಯಿಸಿದ್ದಾರೆ. ರಾಜ್ ಕಾಂತ್ ಎಸ್. ಕ್ಯಾಮೆರಾ ಹಿಡಿದಿದ್ದಾರೆ. ಪ್ರತಾಪ್ ಎಂ. ಆರ್. ಸಂಭಾಷಣೆ ಬರೆದಿದ್ದಾರೆ. ‘ಹೊಸ ಜೀವನ’ ಸಿನಿಮಾದಲ್ಲಿ ಸ್ನೇಹ, ಪ್ರೀತಿ, ಜೀವನದ ಹೋರಾಟ ಹಾಗೂ ಮೌಲ್ಯಗಳ ಸುತ್ತ ಕಥೆಯನ್ನು ಮೋಹನ್ ಕುಮಾರ್ ಅವರು ಎಣೆದಿದ್ದಾರೆ.















