Eye Plex

ಹೀರೋ ಆಗೋದಕ್ಕೆ ಹೊರಟ ‘ದೊಡ್ಮನ್ಸ’ನ ಕಥೆ!

ದುಡ್ಡಿರೋರು ಮಾತ್ರ ಹೀರೋ ಆಗ್ಬೇಕಾ? ಅಂತಿದ್ದಾನೆ ‘ದೊಡ್ಮನ್ಸ’

ಮಧ್ಯಮ ವರ್ಗದ ಹುಡುಗನೊಬ್ಬನ ಬಣ್ಣದ ಕನಸಿನ ಕಹಾನಿ…

ಮಾಸ್‌ ಎಲಿಮೆಂಟ್‌, ಕಮರ್ಷಿಯಲ್‌ ಎಂಟರ್ಟೈನ್ಮೆಂಟ್‌

ಚಿತ್ರ:ದೊಡ್ಮನ್ಸ’
ನಿರ್ಮಾಣ: ಶರತ್‍ ಕೃಷ್ಣ,
ನಿರ್ದೇಶನ: ಶರತ್ ಕೃಷ್ಣ,
ತಾರಾಗಣ: ಶರತ್‍ ಕೃಷ್ಣ, ರೇಷ್ಮಾ ಲಿಂಗರಾಜಪ್ಪ, ಶಿಲ್ಪಾ ಶಿವಕುಮಾರ್, ಹುಲಿ ಕಾರ್ತಿಕ್‍, ಬಲ ರಾಜ್‍ ವಾಡಿ ಮತ್ತಿತರರು.            ‌                                                                                                   ಬಿಡುಗಡೆ: 19 ಜೂನ್ 2026,                                                                                                   ರೇಟಿಂಗ್‌: 3/5

————————–

‘ನೆಪೋಟಿಸಂ’ ಬಗ್ಗೆ ರಾಜಕೀಯ, ಕ್ರೀಡೆ ಮತ್ತು ಚಿತ್ರರಂಗದಲ್ಲಿ ಆಗಾಗ್ಗೆ ಚರ್ಚೆಗಳು, ವಾದ-ವಿವಾದಗಳು ನಡೆಯುವುದನ್ನು ನೀವೆಲ್ಲರೂ ನೋಡಿರುತ್ತೀರಿ. ಅದರಲ್ಲೂ ಚಿತ್ರರಂಗದಲ್ಲಿ ‘ನೆಪೋಟಿಸಂ’ ಬಗ್ಗೆ ಸ್ವಲ್ಪ ಅತಿಯಾಗಿಯೇ ಚರ್ಚೆಗಳು ಆಗುತ್ತಿರುವುದಂತೂ ಸುಳ್ಳಲ್ಲ. ‘ಹೀರೋಗಳ ಮಕ್ಕಳು ಮಾತ್ರ ಹೀರೋಗಳು ಆಗಬೇಕಾ..? ಪ್ರತಿಭೆ ಇದ್ದೋರು ಹೀರೋ ಆಗಬಾರದಾ..?’ ಎಂದು ಕೇಳುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇಂಥದ್ದೊಂದು ಚರ್ಚೆ ಕಳೆದ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ನಡೆಯುತ್ತಿದೆ. ಅಂಥದ್ದೊಂದು ವಿಷಯವನ್ನೇ ಪ್ರಮುಖವಾಗಿಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ ‘ದೊಡ್ಮನ್ಸ’. ಯುವ ಪ್ರತಿಭೆ ಶರತ್‍ ಕೃಷ್ಣ ಇಂಥದ್ದೊಂದು ಪ್ರಸ್ತುತ ವಿಷಯವನ್ನು ಇಟ್ಟುಕೊಂಡು ಅದನ್ನು ಸಿನೆಮಾ ರೂದಲ್ಲಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ.

ಏನಿದು ‘ದೊಡ್ಮನ್ಸ’ನ ಕಥಾನಕ..?

ಶಿವು ಎಂಬ ಹುಡುಗ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಬೇಕು ಎಂದು ಕನಸನ್ನು ಇಟ್ಟುಕೊಂಡು  ಬೆಂಗಳೂರಿಗೆ ಬರುತ್ತಾನೆ. ತನ್ನ ಸ್ನೇಹಿತರಿಂದ ಅಪ್ಪಟ ಪ್ರತಿಭಾವಂತ, ಅದ್ಭುತ ನಟ ಎಂದು ಹೊಗಳಿಸಿಕೊಂಡ ಶಿವುಗೆ ಚಿತ್ರರಂಗದಲ್ಲಿ ಮಾತ್ರ ಅಂದುಕೊಂಡಂತೆ ಅವಕಾಶಗಳು ಸಿಗುವುದಿಲ್ಲ. ಚಿತ್ರರಂಗದಲ್ಲಿ ನಟನಾಗಬೇಕು ಎಂದು ಬಂದವನು ಅವಕಾಶಗಳಿಗಾಗಿ ಇನ್ನಿಲ್ಲದಂತೆ ಬೆವರು ಸುರಿಸುತ್ತಾನೆ. ಆದರೆ, ತನ್ನ ಪ್ರಯತ್ನಕ್ಕೆ ಇಲ್ಲಿ ಬೆಲೆ ಇಲ್ಲ ಎಂದು ಗೊತ್ತಾದಾಗ, ಆಟೋ ಓಡಿಸಿಕೊಂಡು ಸುಮ್ಮನಾಗುವ ನಿರ್ಧಾರಕ್ಕೆ ಬರುತ್ತಾನೆ. ಹೀಗಿರುವಾಗಲೇ, ಮತ್ತೆ ಶಿವುಗೆ ಹೀರೋ ಆಗುವ ಅವಕಾಶ ತನ್ನಿಂತಾನೇ ಒಲಿದು ಬರುತ್ತದೆ. ಇನ್ನೇನು ಶಿವು ಹೀರೋ ಆಗಿ ನಟಿಸುತ್ತಿರುವ ಚಿತ್ರ ಶುರುವಾಗಬೇಕು ಎನ್ನುವಷ್ಟರಲ್ಲಿ ಮತ್ತೊಂದು ದೊಡ್ಡ ತಿರುವು ಎದುರಾಗುತ್ತದೆ. ಹಾಗಾದರೆ, ಅಂದುಕೊಂಡಂತೆ ಶಿವು ಹೀರೋ ಆಗುವುದಕ್ಕೆ ಆಗುವುದಿಲ್ಲವಾ? ದುಡ್ಡು ಇಲ್ಲದವರು ಮತ್ತು ಪ್ರತಿಭೆ ಇರುವವರು ಹೀರೋ ಆಗಬಾರದಾ? ಎಂಬ ಎದುರಾಗುವ ಪ್ರಶ್ನೆಗಳಿಗೆ ಕೊನೆಯಲ್ಲಿ ‘ದೊಡ್ಮನ್ಸ’ ಉತ್ತರ ಕೊಡುವ ಪ್ರಯತ್ನ ಮಾಡುತ್ತಾನೆ.

‘ದೊಡ್ಮನ್ಸ’ ಚಿತ್ರರಂಗದ ಹಿನ್ನೆಲೆಯ ಒಂದು ಕಥೆ. ಆದರೆ, ಅದು ಮುನ್ನಲೆಗೆ ಬರುವುದು ಚಿತ್ರ ದ್ವಿತೀಯಾರ್ಧದಲ್ಲಿ. ಅದಕ್ಕೂ ಮೊದಲು ಚಿತ್ರ ಸುತ್ತುವುದು ನಾಯಕನ ಒಳ್ಳೆಯತನಗಳ ಸುತ್ತ. ಆಟೋ ಓಡಿಸುವ ನಾಯಕ ಎಂಥಾ ಸ್ನೇಹಮಯಿ, ತ್ಯಾಗಮಯಿ, ಕರುಣಾಮಯಿ, ಪ್ರೇಮಮಯಿ ಎಂಬುದನ್ನು ತೋರಿಸುವುದರಲ್ಲೇ ಮೊದಲಾರ್ಧ ಮುಗಿದು ಹೋಗುತ್ತದೆ.
ದ್ವಿತೀಯಾರ್ಧದಲ್ಲೂ ನಾಯಕನ ಒಳ್ಳೆಯತನಗಳು ಮುಂದುವರೆಯುತ್ತವೆ. ಒಳ್ಳೆಯತನಗಳ ಜೊತೆಗೆ ಹಾಡು, ಫೈಟು, ಕಾಮಿಡಿ … ಎಲ್ಲವನ್ನೂ ಸೇರಿಸುತ್ತಾ ಹೋಗುತ್ತಾರೆ ಶರತ್‍ ಕೃಷ್ಣ. ಇನ್ನು, ಹೆಚ್ಚು ನಿರೀಕ್ಷಿಸುವುದು ಕಷ್ಟ ಎಂಬ ತೀರ್ಮಾನಕ್ಕೆ ಪ್ರೇಕ್ಷಕರು ಬರುವಷ್ಟರಲ್ಲೇ ಒಂದು ದೊಡ್ಡ ಟ್ವಿಸ್ಟ್ ಇಟ್ಟು, ಚಿತ್ರವನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ಯುತ್ತಾರೆ. ಆ ಟ್ವಿಸ್ಟು ಸ್ವಲ್ಪ ವಿಭಿನ್ನವಾಗಿದೆ ಎನ್ನುವಷ್ಟರಲ್ಲೇ, ಹೊಡೆದಾಟದ ಮೂಲಕ ಚಿತ್ರ ಮುಗಿಸಿ ಅದೇ ರಾಗಕ್ಕೆ ವಾಪಸ್ಸಾಗುತ್ತಾರೆ.

ನಾಯಕನನ್ನು ಬಿಂಬಿಸುವ, ಅವನ ಒಳ್ಳೆಯತನಗಳನ್ನು ವಿಜೃಂಭಿಸುವ ಹಲವು ಚಿತ್ರಗಳು ಕನ್ನಡದಲ್ಲಿ ಬಂದಿವೆ. ‘ದೊಡ್ಮನ್ಸ’ ಸಹ ಅದೇ ಸಾಲಿಗೆ ಸೇರುವ ಚಿತ್ರ. ಅದೇ ಕಥೆಯನ್ನು ಕಮರ್ಷಿಯಲ್‍ ಚೌಕಟ್ಟಿನಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ಶರತ್‍ ಕೃಷ್ಣ. ಚಿತ್ರ ಪ್ರಾರಂಭವಾಗುವುದು ಒಂದು ಜಾತ್ರೆಯ ಹಾಡಿನಿಂದ. ನಂತರ ಫೈಟು, ಕಾಮಿಡಿ, ಸೆಂಟಿಮೆಂಟು, ಪ್ರೀತಿ … ಒಂದರ ಹಿಂದೊಂದು ಅಂಶಗಳು ಬರುತ್ತಲೇ ಇರುತ್ತವೆ. ಪ್ರೇಕ್ಷಕ ರಿಪೀಟ್‍ ಎಂದು ಹೇಳದಿದ್ದರೂ, ಫಾರ್ಮುಲಾ ಪುನರಾವರ್ತನೆ ಆಗುತ್ತಿರುತ್ತದೆ. ಇದ್ಯಾವುದೂ ಪ್ರೇಕ್ಷಕರಿಗೆ ಹೊಸದಲ್ಲವಾದ್ದರಿಂದ ‘ದೊಡ್ಮನ್ಸ’ನ ದೊಡ್ಡತನ ಬೆಳಕಿಗೇ ಬರುವುದಿಲ್ಲ.
ಶರತ್‍ ಕೃಷ್ಣ ಮೊದಲ ಚಿತ್ರದಲ್ಲೇ ನಟನೆ, ನಿರ್ಮಾಣ, ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೊಡೆದಾಟ ಮತ್ತು ನೃತ್ಯದಲ್ಲಿ ಕಾಣುವ ಲವಲವಿಕೆ, ಅಭಿನಯದಲ್ಲಿ ಕಡಿಮೆಯಾಗಿದೆ. ‘ಲವ್‍ ಯೂ ಮುದ್ದು’ ಚಿತ್ರದಲ್ಲಿ ಅಭಿನಯದಲ್ಲಿ ಗಮನಸೆಳೆದಿದ್ದ ರೇಷ್ಮಾಗೆ ಇಲ್ಲಿ ಹೆಚ್ಚು ಕೆಲಸವಿಲ್ಲ. ‘ಹುಲಿ’ ಕಾರ್ತಿಕ್‍, ಬಲರಾಜ್‍ ವಾಡಿ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಹಾಡು ಮತ್ತು ಛಾಯಾಗ್ರಹಣಕ್ಕಿಂತ ಸಾಹಸ ನಿರ್ದೇಶಕರಾದ ಜಾಗ್ವಾರ್ ಸಣ್ಣಪ್ಪ ಮತ್ತು ಅಲ್ಟಿಮೇಟ್‍ ಶಿವು ಅವರ ಕೆಲಸ ಗಮನಸೆಳೆಯುತ್ತದೆ. ‘ಕಲೆ ಎನ್ನುವುದು ಬಡವರ ಮನೆಯ ದೇವತೆಯೇ ಹೊರತು ಶ್ರೀಮಂತರ ಮನೆಯ ಆಳಲ್ಲ …’ ಎಂಬ ಕೆಲವು ಸಂಭಾಷಣೆಗಳು ಇಷ್ಟವಾಗುತ್ತವೆ.

Related Posts

error: Content is protected !!